ಏಕ್ ಲಾಖ್ ಪೇಡ್ ಮಾ ಕೇ ನಾಮ್ ಅಭಿಯಾನ ನಿಮಿತ್ತ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಅವರು ಶ್ರೀಶೈಲದಲ್ಲಿ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರಿಗೆ ಬಿಲ್ವಪತ್ರಿ ಸಸಿ ವಿತರಿಸಿದರು
ಏಕ್ ಲಾಖ್ ಪೇಡ್ ಮಾ ಕೇ ನಾಮ್ ಅಭಿಯಾನ ಅಂಗವಾಗಿ ಈವರೆಗೆ 21 ಸಾವಿರ ಸಸಿಗಳನ್ನು ವಿತರಿಸಲಾಗಿದೆ ಎಂದು ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಹೇಳಿದರು.
ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರಿಗೆ ಅಭಿಯಾನ ನಿಮಿತ್ತ ಸೋಮವಾರ ಬಿಲ್ವಪತ್ರಿ ಸಸಿ ವಿತರಿಸಿ ಈ ಮಾಹಿತಿ ನೀಡಿದರು.
ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ಭಾರತದ ವಿವಿಧೆಡೆ ಬಿಲ್ವಪತ್ರಿ ಹಾಗೂ ಇತರ ಸಸಿಗಳನ್ನು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಮಾತೆ ಕರುಣಾದೇವಿ ಅವರಿಗೆ ಅಭಿಯಾನ ಮೂಲಕ ಗೌರವ ಸಮರ್ಪಿಸುತ್ತಿರುವುದು ಪ್ರಶಂಸನೀಯ ಎಂದು ಜಗದ್ಗುರುಗಳು ಹೇಳಿದರು.
ಶ್ರಾವಣ ಬಹಳ ಪವಿತ್ರವಾದದ್ದು. ಈ ಮಾಸದಲ್ಲಿ ಬಿಲ್ವಪತ್ರಿ ಸಸಿ ವಿತರಿಸುವುದು ಪುಣ್ಯದ ಕೆಲಸ. ಅಭಿಯಾನಕ್ಕೆ ಪೀಠದ ಸಹಕಾರ ಇರಲಿದೆ ಎಂದು ತಿಳಿಸಿದರು.
ಡಾ. ರಾಜಶೇಖರ ಶಿವಾಚಾರ್ಯ, ಕಾಶಿನಾಥ ಜಕ್ಕಾ ಮತ್ತಿತರರು ಇದ್ದರು.
ಬೀದರ್ನ ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ, ಶ್ರೀ ಜಗದ್ಗುರು ಪಂಚಾಚಾರ್ಯ ಯುವಕ ಸಂಘ, ಶ್ರೀಶೈಲದ ಅಕ್ಕ ಮಹಾದೇವಿ ಚೈತನ್ಯ ಪೀಠ, ನೌಬಾದ್ನ ಜ್ಞಾನಶಿವಯೋಗಾಶ್ರಮ ಹಾಗೂ ಈಶ್ವರಿ ಮಹಿಳಾ ಮಂಡಳ ಸಹಯೋಗದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.