ಬೀದರ್,
ಇಂದು ಆಕಾಶದಲ್ಲಿ ಖಗೋಳ ವಿಸ್ಮಯವಾಗಿ ಚಂದ್ರಗ್ರಹಣ ಸಂಭವಿಸಿದ್ದು, ಇದನ್ನು “ರಕ್ತ ಚಂದಿರ” ಎಂದೂ ಕರೆಯಲಾಗುತ್ತದೆ. ಭೂಮಿ, ಚಂದ್ರ ಮತ್ತು ಸೂರ್ಯ ಒಂದೇ ಸರಳರೇಖೆಯಲ್ಲಿ ಬಂದಾಗ ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಇರುವುದರಿಂದ ಚಂದ್ರಗ್ರಹಣ ಉಂಟಾಗುತ್ತದೆ.

ಚಂದ್ರ ಕೆಂಪಾಗಿ ಕಾಣಿಸಿಕೊಳ್ಳುವ ಕಾರಣವೆಂದರೆ ಸೂರ್ಯನ ಬೆಳಕು ಭೂಮಿಯನ್ನು ದಾಟಿ ಚಂದ್ರನ ಮೇಲೆ ಬೀಳುವಾಗ ಕೆಂಪು ಬಣ್ಣದ ತರಂಗದೈರ್ಘ್ಯ ಹೆಚ್ಚು ಇರುವುದರಿಂದ ಕೆಂಪು ಕಿರಣಗಳು ಮಾತ್ರ ಚಂದ್ರನ ಮೇಲೆ ತಲುಪುತ್ತವೆ. ಇದರಿಂದ ಚಂದ್ರ ಕೆಂಪಾಗಿ ಕಾಣಿಸಿ “ರಕ್ತ ಚಂದಿರ” ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಸುಮಾರು 4 ಲಕ್ಷ ಕಿಲೋಮೀಟರ್ ದೂರದಲ್ಲಿ ನಡೆಯುವ ಈ ಖಗೋಳ ಘಟನೆಗೆ ಭೂಮಿಯ ಮೇಲಿನ ದೈನಂದಿನ ಕ್ರಿಯೆಗಳೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.
ಸಮಾಜದಲ್ಲಿ ಚಂದ್ರಗ್ರಹಣದ ಬಗ್ಗೆ ಇರುವ ಮೌಢ್ಯಗಳನ್ನು ನಿವಾರಿಸಲು ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಲು ಭಾರತೀಯ ಸಂವಿಧಾನದ 51 (ಎ) ಅನುಚ್ಛೇದದ ಆಶಯದಂತೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಭಾರತ ಜ್ಞಾನ ವಿಜ್ಞಾನ ಸಮಿತಿ, ವೈಜ್ಞಾನಿಕ ಸಂಶೋಧನಾ ಸಮಿತಿ, ಬುದ್ಧ ಬಸವ ಅಂಬೇಡ್ಕರ್ ಯುವ ಸಂಘ, ಬಸವ ಕೇಂದ್ರ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ, ಮಾದರ ಚನ್ನಯ್ಯ ಸಹಕಾರ ಸಂಘ, ಪ್ರಭುರಾವ ಕಂಬಳೆವಾಲೆ ಕನ್ನಡ ಸೇವಾ ಸಂಘ ಮತ್ತು ಲಿಂಗಾಯತ ಸಮನ್ವಯ ಸಮಿತಿ ಸಂಯುಕ್ತಾಶ್ರಯದಲ್ಲಿ ಅಂಬೇಡ್ಕರ್ ವೃತ್ತದ ಬಳಿ ಚಂದ್ರಗ್ರಹಣ ಸಮಯದಲ್ಲಿ ಬಾಳೆಹಣ್ಣು ತಿನ್ನುವ ಮೂಲಕ ಮೌಢ್ಯತೆಯ ಭೀತಿಯನ್ನು ತೊಲಗಿಸುವ ಸಂಕಲ್ಪ ಮಾಡಲಾಯಿತು. “ತೊಲಗಲಿ ತೊಲಗಲಿ ಮೌಢ್ಯತೆ ತೊಲಗಲಿ” ಎಂಬ ಘೋಷಣೆಗಳು ಮೊಳಗಿದವು.
ಕಾರ್ಯಕ್ರಮದಲ್ಲಿ ಎಂ.ಎಸ್. ಮನೋಹರ (ರಾಜ್ಯ ಸಮಿತಿ ಸದಸ್ಯರು), ಕಲಾಲ್ ದೇವಿಪ್ರಸಾದ (ಜಿಲ್ಲಾ ಅಧ್ಯಕ್ಷರು), ಶ್ರೀಕಾಂತ ಸ್ವಾಮಿ, ಶರಣಪ್ಪ ಮಿಠಾರೆ, ಡಾ. ಕಾಶಿನಾಥ ಚೆಲ್ವಾ, ವಿಜಯಕುಮಾರ ಸೋನಾರೆ, ಮಹೇಶ ಗೋರನಾಳಕರ್, ಮಾರುತಿರಾವ ವಾಘಮಾರೆ, ರಾಜಕುಮಾರ ಕರುಣಾಸಾಗರ, ಜಗದೀಶ ಬಿರಾದಾರ, ಧರ್ಮಪ್ರಕಾಶ ಆರ್ಯ, ಶಾಂತಕುಮಾರ ಉದಯಗಿರೆ, ಉಮೇಶ ಜಾಬಾ ಸೇರಿದಂತೆ ಅನೇಕರು ಭಾಗವಹಿಸಿದರು.






