ಬೀದರ, ಮೇ.04 (ಕರ್ನಾಟಕ ವಾರ್ತೆ):- ಅರಣ್ಯ, ಜೀವಿಶಾಸ್ತ್ರಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಸೋಮವಾರ ಬಸವಕಲ್ಯಾಣದ ಅನುಭವ ಮಂಟಪದ ಕಾಮಗಾರಿಯನ್ನು ಪರಿಶೀಲಿಸಿ ನಂತರ ಮುಂದಿನ ಮಾರ್ಚ ಒಳಗಾಗಿ ಅನುಭವ ಮಂಟಪ ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದರು.
ಬಸವಾದಿ ಶರಣರು ಈ ಜಗತ್ತಿನ ಸರ್ವಶ್ರೇಷ್ಟ ದಾರ್ಶನಿಕರು, ಮಹಾ ಮಾನವತಾವಾದಿಗಳು, ಕಾಯಕವೇ ಕೈಲಾಸವನ್ನು ಅಳವಡಿಸಿಕೊಂಡು ಜಗತ್ತಿಗೆ ಪ್ರಥಮ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ನೀಡಿದರು. 770 ಕಂಬಗಳ ಮೇಲೆ 770 ಶರಣರ ವಚನಗಳನ್ನು ಕೆತ್ತಲಾಗುತ್ತಿದೆ. ವೈಜ್ಞಾನಿಕವಾಗಿ ನೆಮ್ಮದಿ ನೀಡುವಂಥ ಇಷ್ಟಲಿಂಗ ತರಬೇತಿ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ. ಬದುಕನ್ನು ಹಸನಗೊಳಿಸಿಕೊಳ್ಳಲು ವೈಚಾರಿಕ ವಚನಗಳು ಸಹ ಆಧುನಿಕ ವಿಜ್ಞಾನ ತಂತ್ರಜ್ಞಾನ ಮೂಲಕ ಐಐಟಿ ವಿಜ್ಞಾನಿಗಳ ಮೂಲಕವಾಗಿ ಜನಸಾಮಾನ್ಯರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಕಾಯಕವೇ ಕೈಲಾಸ ಎಂದು ಹೇಳಿರುವ ಶರಣರ ಜೀವನವನ್ನು ಬಿಂಭಿಸುವ ಶರಣ ಗ್ರಾಮ ನಿರ್ಮಾಣಗೊಳ್ಳುತ್ತಿದೆ. ಈಗಿನ ಯುವಕರಿಗೆ ಅಗತ್ಯವಾದ ಕೌಶಲ್ಯ ತರಬೇತಿ ನೀಡುವ ಕೇಂದ್ರ ಆರಂಭಿಸಲಾಗುವುದು. ವೃತ್ತಿಯಲ್ಲಿ ಯಾವುದು ಮೇಲಿಲ್ಲ ಕೀಳಿಲ್ಲ ಎಂದು ಸಚಿವರು ತಿಳಿಸಿದರು.
ಅನುಭವ ಮಂಟಪಕ್ಕೆ ಹಣದ ಕೊರತೆ ಇಲ್ಲ, ಈವರೆಗೆ 480 ಕೋರಿ ರೂ. ಖರ್ಚಾಗಿದೆ. ನಮ್ಮ ಮುಖ್ಯಮಂತ್ರಿಗಳು ಈ ಪೈಕಿ 280 ಕೋಟಿ ರೂ. ಅನುದಾನ ನೀಡಿದ್ದಾರೆ. ಉಳಿದ ಹಣವನ್ನು ಸಹ ಶೀಘ್ರವೇ ಬಿಡುಗಡೆ ಮಾಡಲಿದ್ದಾರೆ. ಕಾಲಮಿತಿಯಲ್ಲಿ ಕಾಮಗಾತಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಅನುಭವ ಮಂಟಪದ ಸಂಯೋಜಕರಾದ ಡಾ.ಬಾಬಾಸಾಹೇಬ್ ಗಡ್ಡೆ ಸೇರಿದಂತೆ ಗಣ್ಯ ಮಾನ್ಯರು ಉಪಸ್ಥಿತರಿದ್ದರು.






